Pages

3/6/21

ಸಂತಸವ ಹುಡುಕುತ್ತಾ....

ಹುಡುಕುತ್ತ ಹೊರಟೆ ಸಂತಸವ,
ಎಂ.ಟಿ.ಆರ್, ಸಿ.ಟಿ.ಆರ್, ಜನತಾ
ವಿದ್ಯಾರ್ಥಿ ಭವನ, ಮೈಲಾರಿಯ ದಾರಿಯಲಿ.
ಕಂಡುಕೊಂಡೆ ಸಂತಸವ - ದೋಸೆಗಾಗಿ 
ಕಾಯುವ ಸರತಿ ಸಾಲಿನಲಿ!

ಹುಡುಕುತ್ತಾ ಹೊರಟೆ ಸಂತಸವ
ಕಬ್ಬನ್ ಪಾರ್ಕ್, ಲಾಲಬಾಗ್
ಕುಕ್ಕರಹಳ್ಳಿ , ಚಾಮುಂಡಿ ಬೆಟ್ಟದ ತಪ್ಪಲಲ್ಲಿ.
ಕಂಡುಕೊಂಡೆ ಸಂತಸವ - ನೇರ ನುಡಿ,
ನೇರನಡೆಯ ನಡಿಗೆಯಲಿ !

ಹುಡುಕುತ್ತಾ ಹೊರಟೆ ಸಂತಸವ
ಮೈಸೂರ ಮಲ್ಲಿಗೆ, ಮೂಕಜ್ಜಿಯ ಕನಸು
ನಾಕುತಂತಿ, ಜುಗಾರಿ ಕ್ರಾಸಿನಲಿ.
ಕಂಡುಕೊಂಡೆ  ಸಂತಸವ - ಕವಿ
ಹೃದಯದೊಡೆಗಿನ ಮಾತುಕತೆಯಲಿ!

ಕೆದಕುತ್ತಾ ಹೊರಟಾಗ ಅರಿತದ್ದು-
ದೋಸೆಗಾಗಿನ ಕಾಯುವಿಕೆಯ ರುಚಿ,
ಹಸಿರುಹಾಸಿನ ಮೇಲಣ ನಡಿಗೆ
ಕನ್ನಡಕಾವ್ಯದ ಮನನ..
ಈ ಎಲ್ಲದರದೊಳಗಿನ ಸಂತಸದ
ಸಾಮಾನ್ಯ ಅಂಶ - ನಾನೇ ನಾನೇ....! 


ನಿಜ ಸಂತಸಕೆ ದಾರಿ
ನಾನು ನನ್ನೊಳಗೆ ಇರುವುದೊಂದೆ!!


- ಸಂ.K


1/20/21

ಏಕಾಂಗಿಯಾಗೇ ನಡೆ ನೀ

ಕವಿ ರಬೀಂದ್ರನಾಥರ ಸ್ಫೂರ್ತಿಗೀತೆ "ಎಕ್ಲ ಚಲೋ ರೇ" ಹಾಡಿನಿಂದ ಪ್ರೇರಿತ ಅನುವಾದ.

"ಏಕಾಂಗಿಯಾಗೇ ನಡೆ ನೀ"

ನಿನ್ನ ಕರೆಗಾರು ಓಗೊಡದಿರೆ-
ಏಕಾಂಗಿಯಾಗೇ ನಡೆ ನೀ;

(ನಿನ್ನೊಡನೆ) ಯಾರು ನುಡಿಯದಿರೆ,  ಎಣಿಸದಿರು ನೀ ನಿರ್ಭಾಗಿಯೆಂದು ;
(ನಿನ್ನೊಡನೆ) ಯಾರು ನುಡಿಯದಿರೆ,  ಎಲ್ಲರೂ ದೂರ ನಡೆದೆಡೆ, ಎಲ್ಲರೂ (ನುಡಿಯಲು) ಅಂಜಿದರೆ,
ತೆರದ ಎದೆಯಲಿ ಹಿಂಜರಿಯದೆ ನುಡಿ ನಿನ್ನ ಮನದೊಡನೆ

ಎಲ್ಲರೂ ದೂರ ಹೋದಲ್ಲಿ,ಓ  ನಿರ್ಭಾಗಿಯೇ, ಎಲ್ಲರೂ ದೂರ ಹೋದೆಡೆ
ಊಹೆಗೆಟುಕದ ನಿನ್ನೀ ಹಾದಿಯಲಿ ಯಾರು ತಿರುಗಿ ನೋಡದಿರೇ, 
ಹೊರಟು ಬಿಡು ಮುಳ್ಳಿನಪಥದಲಿ ನೆತ್ತರ ಲೆಕ್ಕಿಸಿದೆ, 
ಏಕಾಂಗಿಯಾಗೇ ನಡೆ ನೀ


ಯಾರು ಬೀರದಿರೆ ಬೆಳಕ ನೀ ನಡೆಯುವೆಡೆಗೆ, ಓ ನಿರ್ಭಾಗಿಯೇ,  
ಕಗ್ಗತ್ತಲ ರಾತ್ರಿ ಗುಡುಗಿನೊಡನೆ ಮುಸಲಧಾರೆಯ ತಂದಿತ್ತೆಡೆ-
ಮಿಂಚು ಹೊತ್ತಿಸಲಿ ಬೆಳಕಿನ ಕಿಡಿಯ ನಿನ್ನಲಿ, ಬೆಳಗಲಿ ನೀ ನಡೆವ ಹಾದಿಯ;

ನಿನ್ನ ಕರೆಯನಾರು ಗಮನಿಸದಿರೆ,
ಏಕಾಂಗಿಯಾಗೇ ನಡೆ ನೀ ;


ಅನುವಾದ : ಸಂK (ಸಂತೋಷ್ ಮೂಗೂರ್)

--------------------------------------------------    

ಮೂಲ ಕವನ ಮತ್ತು ಇಂಗ್ಲೀಷ್ ಅನುವಾದ : ರಬೀಂದ್ರನಾಥ ಟ್ಯಾಗೋರ್

If there is no-one responding to your call - then go on alone

If no-one speaks (to you), don't think you are unfortunate, if no-one speaks (to you),
If everyone turns away, if everyone fears (to speak), then with an open heart without hesitation speak your mind alone 

If everyone walks away, O unlucky one, everyone walks away
If no-one looks back towards the (your) unpredictable path, then with thorn pricked (of the path) bloodied feet, walk alone
If no-one heeds your call - then walk alone 

If no-one shines a light (on the path), O unlucky one,
If the dark night brings thunder and storm at the door - then let the lightning ignite the light in you alone to shine on the path 

If no-one heeds your call - then walk alone 

10/11/20

ಮಂಗಳಮುಖಿ ಮಂಗ!

ಜೀವಚರಿತ್ರೆಯಲ್ಲಿ 

ಮಂಗನಿಂದ ಮಾನವ...

ಮಂಗನಿಂದ ಮಾನವ ..

ಕೇಳಿ ಕೇಳಿ ಸಾಕಾಗಿತ್ತು

ಮಾನವ ಜೀವ ಬೇಸತ್ತಿತ್ತು


ಬದಲಾಯಿಸಬೇಕು

ಜಗದ ಭವಿಷ್ಯವ ಎನ್ನೋ ಹಂಬಲ

"ಮಂಗಳನ ಅಂಗಳದಲ್ಲಿ ಮಾನವ

ನೆಂದು ಬರೆದಿಡ ಬೇಕು" 

ನಿರ್ಧಾರ ಅಚಲವಾಗಿತ್ತು..                                                    

ಸರ್ಕಾರದ ಸಮ್ಮತಿಯು ದೊರಕಿತ್ತು

ಮೊದಲ ಹೆಜ್ಜೆ...ಇಟ್ಟಾಗಿತ್ತು

ಈ ಮಂಗಳವಾರ...ಶುಭದಿನ!


ಎಲ್ಲ ಗ್ರಹಗಳು ಕೂಡಿ

ಬಂದಿದ್ದರಿಂದಲೋ ಏನೋ..

ಇಂದು ರಂಗಣ್ಣ , ರಾಧಕ್ಕರೂ

ಕೂಡ ಇದರದ್ದೇ ಚರ್ಚೆ

ಮಂಗಳನೆಡೆಗೆ ಮಾನವ...

ಮಂಗಳನೆಡೆಗೆ ಮಾನವ...

ಬೇರೆ ಬ್ರೇಕಿಂಗ್ ನ್ಯೂಸ್ಗಳ ಭರಾಟೆಇಲ್ಲ.. 

ಕೋವಿಡ್ ಗೋಳು, ರಾಗಿಣಿ ರಾಗ, ಬಂಡೆಯ ಮೇಲೆ ದಾಳಿ 

ಎಲ್ಲಕ್ಕೂ ಒಂದು ಚಿಕ್ಕ ಬ್ರೇಕ್!

ನೇರ ದಿಟ್ಟ ನಿರಂತರ ವರದಿ ಭವಿಷ್ಯದೆಡೆಗೆ...


ಜಾಹೀರಾತುಗಳ ಗೋಡೆಯನ್ನು ದಾಟಿ

ಇನ್ನೇನೂ ಮಂಗಳನ ಅಂಗಳ ತಲಪಿಯೇ ಬಿಡುವಷ್ಟರಲ್ಲಿ

ಜಿಗಿ ಜಿಗಿ ಮಳೆ ಗುಡುಗು ಸಿಡಿಲು 

ಕೈ ಕೊಟ್ಟ ಕರೆಂಟ್...

ಹಾಳು ಸರ್ಕಾರ...ಯಾವುದಾದ್ರು ಸರಿಯಾಗಿ ಮಾಡಿದ್ದುಂಟೆ?


ಹೊರಬಂದು ನೋಡಿದರೆ

ಮುಸ್ಸಂಜೆಯ ಮುಗಿಲು, ಚದುರಿದ ಮೋಡಗಳು, ಜಟಿ ಜಟಿ ಮಳೆ, ಮಣ್ಣ ವಾಸನೆ ಎಲ್ಲವೂ ಹಿತವೇ...

ತಲೆಯೆತ್ತಿದರೆ ಎದರು ಮನೆ ಡಿಶ್ ಮೇಲೆ ಆರಾಮಾಸನದಲ್ಲಿ ಕುಳಿತ ಮಂಗ... ಮೊಗದಲ್ಲೊಂದು ಮುಗುಳುನಗೆ ಮಿಂಚಿದಂತಾಯ್ತು


ಕರೆಂಟ್ ಬಂತೆಂದು ಮತ್ತೆ ಒಳ ಓಡಿದರೆ

ಅಷ್ಟರಲ್ಲೇ ಶುರುವಾಗಿತ್ತು ಮತ್ತೊಂದು ಬ್ರೇಕಿಂಗ್ ನ್ಯೂಸ್ನ ಅಬ್ಬರ

ಮಂಗಳಮುಖಿ ಮಂಗ...!!

ಮಂಗಳಮುಖಿ ಮಂಗ...!!

- ಸಂK


(ವಾಟ್ಸಾಪ್ ಫಾರ್ವಾರ್ಡ್ ಫೋಟೋದಿಂದ ಪ್ರೇರಿತ)




4/30/20

ನೆರಳೂ ನನ್ನದಲ್ಲ !

ದೀಪದ ಕೆಳಗೆ ಕತ್ತಲೆ
ಬೆಳಕಿದ್ದರಷ್ಟೆ ನೆರಳು!

ಬೆಳಕಿನೆಡೆಗೆ ಹೊರಟರೆ ಹಿಂದೆ,
ಬೆಳಕಿಂದ ದೂರ ಸರಿದರೆ ಮುಂದೆ!

ಬೆಳಕ ಹತ್ತಿರ ಹೋದಷ್ಟೂ  ದೊಡ್ಡದು
ಬೆಳಕಿಂದ ದೂರ ಸರಿದಷ್ಟೂ  ಚಿಕ್ಕದು!

ಬೆಳಕು ಹೆಚ್ಚಿದಷ್ಟು ಇನ್ನಷ್ಟು ಸ್ಪಷ್ಟ
ಬೆಳಕು ಮಾಸಿದಷ್ಟು ಅಸ್ಪಷ್ಟ!

ಆಗುವುದೆಲ್ಲವು ಬೆಳಕಿಂದಲೇ ಎನ್ನುವುದಾದರೆ
ನಾನು ನನ್ನದಾದರು ಏನು?
ನೆರಳೂ ನನ್ನಣತಿಯಲ್ಲಿ ಇಲ್ಲದಿರೆ?

ಬೆಳಕು ಬೇರೆ ನಾನು ಬೇರೆ
ಎಲ್ಲವೂ ಅದರಿಂದಲೇ
ನಾನು ನಿಮಿತ್ತ ಮಾತ್ರವೇ
ಎನ್ನುವಷ್ಟರಲ್ಲೇ
ಆ ಒಂದು ಕ್ಷಣ
ನಾನು ಇದ್ದು ....ಬೆಳಕೂ  ಇದ್ದು... ನೆರಳಿಲ್ಲದ ಆ ಕ್ಷಣ !!
ನಾನು ಬೆಳಕ ಸೇರಿ ಒಂದಾಗಿ
ನೆರಳ ಮೀರಿದ ಆ ಕ್ಷಣ !!
ಅಳಿದದ್ದು ಏನು? ಉಳಿದದ್ದು ಏನು?
ಎನ್ನೋ ಜಿಜ್ಞಾಸೆ ಮೀರಿದ ಆ ಕ್ಷಣ...
ಅದುವೇ ...
ಹೃದಯ ಕಮಲವರಳುವ ಕ್ಷಣ!

4/27/20

ಅಂತರ

ನೇರ,ದಿಟ್ಟ
ನಿರಂತರ
ಒಂದರ ಪಕ್ಕದಲ್ಲೇ
ಒಂದಿದ್ದರು
ಎಂದು ಸೇರದ
ದೂರದಲ್ಲೆಲ್ಲೋ
ಸೇರಿದಂತೆ ಕಂಡರು
ದೂರವೇ ಉಳಿಯುವ

ಅಂತರ ಕಾಪಾಡಿಕೊಂಡೆ
ಅಂತರಂಗ ಹಂಚಿಕೊಂಡ
ದೂರ ಕಾಯ್ದುಕೊಂಡೆ
ಹತ್ತಿರವಾಗುಳಿದ
ಜಗದ ಹೊರೆ ಹೊತ್ತು
ನಡುವೆ ಅಂತರವಿರಲಿ
ಎಂದು ಮೌನದಿಂದುಳಿದ

ಆ ಹಳಿಗಳು
ಇನ್ಯಾವುದೋ
ಹೃದಯಗಳ ನೆನಪಿಸಿದರೆ
ನಿಟ್ಟುಸಿರ ಬಿಟ್ಟು
ಸುಮ್ಮನಿದ್ದು ಬಿಡಿ
"ನಡುವೆ ಅಂತರವಿರಲಿ"