10/1/09

ಗಾಂಧಿ.. ಎಂಬ ಮನಸ್ಥಿತಿ !

ಮೊದಲ ಬಾರಿಗೆ "ಗಾಂಧಿ" ಎನ್ನುವ ಹೆಸರನ್ನು ಅಥವಾ ಪದವನ್ನು ಕೇಳಿದ್ದು ಯಾವಾಗ ಅನ್ನೋದು ನೆನಪೆ ಬರ್ತಾ ಇಲ್ಲ. ಅಷ್ಟು ಹಳತಾಗಿ ಹೋಗಿದೆ "ಗಾಂಧಿ" ಎಂಬ ಪದ ಬದುಕಿನಲ್ಲಿ. ಮೋಹನ ದಾಸ ಕರ್ಮಚಂದ್ ಗಾಂಧಿ "ಮಹಾತ್ಮ ಗಾಂಧಿ"ಯಾಗಿ "ಮಹಾತ್ಮ"ರಾಗಿ ಕೊನೆಗೆ ಗಾಂಧಿಯಾಗಿ ಯಾವಾಗ ಹೇಗೆ ರೂಪಾಂತರಗೊಂಡರೋ ಗೊತ್ತಿಲ್ಲ.ಆದರೆ ಇಂದು ಗಾಂಧಿ ಒಬ್ಬ ವ್ಯಕ್ತಿಯಾಗಿ ಉಳಿದಿಲ್ಲ. ಗಾಂಧಿ ಒಂದು ಮನಸ್ಥಿತಿಯಾಗಿ ಬಿಟ್ಟಿದೆ....ಶಾಂತಿ,ಅಹಿಂಸೆಗಳೆಂಬ ಕಲ್ಪನೆಗಳಿಗೆ ಬಣ್ಣಕಟ್ಟುವ, ಅದನ್ನು ಮೂರ್ತರೂಪಕ್ಕೆ ಇಳಿಸುವ, ಸತ್ಯಂ ಶಿವಂ ಸುಂದರಂ ಅನ್ನುತ್ತಾ ಸತ್ಯದಲ್ಲಿ ಸೌಂದರ್ಯವನ್ನು ಹಾಗೂ ಶಿವನನ್ನು ಕಾಣುವ, ವ್ಯಕ್ತಿಗಿಂತ ವಿಚಾರಗಳನ್ನು ಆದರಿಸುವ, ಅಂದು ಕೊಂಡದ್ದನ್ನು ಸಾಧಿಸಿಯೇ ತೀರಿಸುವ, ಸಾಮಾನ್ಯ ಮಹಾತ್ಮನಾಗುವ ಅಸಾಮಾನ್ಯ ಮತ್ತು ತನ್ನೊಳಗಿನ ಮಹಾತ್ಮನ ಮುಂದೆ ತಾನೆ ಸಾಮಾನ್ಯನಾಗಿ ಬಿಡುವ, ಕೊನೆಗೆ ಎಲ್ಲರಿಗೂ ಸಹಾಯಮಾಡ ಹೊರಟು ತಾನೆ ಅಸಹಾಯಕನಾಗಿ ಬಿಡುವ ಮನಸ್ಥಿತಿಗೊಂದು ಪದವಾಗಿಬಿಟ್ಟಿದೆ. ಹಾಗಾಗಿ ಗಾಂಧಿ ಎಂಬ ಮನಸ್ಥಿತಿಯ ತಲಪುವ ಕ್ರಿಯೆಯಲ್ಲಿ ಪ್ರತಿಯೊಬ್ಬನಿಗೂ ಒಬ್ಬಬ್ಬ ಗಾಂಧಿ ಕಂಡುಬರುತ್ತಿರುವುದರಲ್ಲಿ ಆಶ್ಚರ್ಯವೇನು ಇಲ್ಲ. ಈ ದಿನ ಪ್ರತಿಯೊಬ್ಬರು ಗಾಂಧಿಯೆಂಬ ವ್ಯಕ್ತಿಯ ಕುರಿತು ಅವರವರದೇ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದರೆ ಅದು ಗಾಂಧಿ ಎಂಬ ಮನಸ್ಥಿತಿಯ ಒಂದು ಪ್ರಕಟಿತ ರೂಪ ಅಷ್ಟೇ !!

ಗಾಂಧಿಯೆಂಬ ಮನಸ್ಥಿತಿಯ ಕಲ್ಪನೆಯ ಮೂರ್ತರೂಪ - ಗಾಂಧಿಯ ಜನ್ಮ ದಿನ ಇಂದು. ನನ್ನ ಕಡೆಯಿಂದ ನಮನ ಗಾಂಧಿಗೆ, ಗಾಂಧಿ.. ಎಂಬ ಮನಸ್ಥಿತಿಗೆ !!

8/1/09

ಮರೆವು

೧. ಈ ಮರೆವೆನ್ನುವುದೆ ಹೀಗೆ..
ಕಳಚಿಬಿದ್ದ ಮೊಳೆಯ ಗುರುತ
ಮುಚ್ಚುವ ಸುಣ್ಣದ ಹಾಗೆ;
ಎಷ್ಟಿದ್ದರು ಒಳಗಿರುವ ನೋವು
ಮುಚ್ಚಿ ಬಿಡುವುದು ಹೊರಗೆ ಕಾಣದ ಹಾಗೆ !

೨. ಹಳೆಯ ನೋವುಗಳ ತೆರಯ ಮರೆಗೆ ಕಳಿಸುವ
ಹೊಸಕನಸುಗಳಿಗೆ ದಾರಿ ಸುಗಮಗೊಳಿಸುವೀ ಮರೆವು;
ಬಣ್ಣಗೆಟ್ಟಿದ್ದ ಆಗಸದಲ್ಲಿ ಕಾಮನಬಿಲ್ಲ ಕಟ್ಟುವ
ಮಧ್ಯಾಹ್ನದ ಮಳೆಯ ಮುಂಚಿನ ಮೋಡದ ಹಾಗೆ !!

ನೆನಪು

೧. ಈ ಸಣ್ಣ ಸಣ್ಣ ನೆನಪುಗಳೆ ಹೀಗೆ..
ಗೋಡೆಯ ಮೇಲಿನ ಸಣ್ಣ ಮೊಳೆಯ
ದೊಡ್ಡ ನೆರಳಿನ ಹಾಗೆ,
ಒಳಗಿಳದಿದ್ದಕ್ಕಿಂತ ಹೊರಗ್
ಹರಡಿದ್ದೆ ಹೆಚ್ಚು !

೨. ಭೂತಕಾಲದ ಭವ್ಯತೆಯ ಬೆರಗಿನಲ್ಲಿ ಮುಳುಗಿಸುವ
ಭವಿಷ್ಯಕ್ಕೆ ಬಣ್ಣಬಣ್ಣದ ನೆನಪುಗಳ ಸೃಷ್ಟಿಸುವ ಈ ನೆನಪು...
ತಾನು ಕಪ್ಪುಬಿಳುಪಿನಲ್ಲಿದ್ದರು ವರ್ತಮಾನಕ್ಕೆ ಬಣ್ಣಕಟ್ಟುವ
ಮಧ್ಯಾಹ್ನದ ಮಳೆಯ ನಡುವಿನ ಕಾಮನಬಿಲ್ಲಿನ ಹಾಗೆ !!

ನೆನಪು !

ಇನ್ನೂ ನಿನ್ನೆಯದೆ ನೆನಪುಗಳು,
ನಾಳೆಯದೆ ಹಗಲುಗನಸಗಳು..
ಛೇ! ಇಂದೇ ಮರೆತು ಹೋಗಬೇಕೆ ?

ನಿನ್ನೆಯೂ ನೆನಪಿತ್ತು..
ನಾಳೆ ಮತ್ತೆ ನೆನಪಾಗಬಹುದೇನೋ..
ಇಂದೆ ಮರೆತುಹೋಗಬೇಕೆ ? ಹಾಳು ಮರೆವು..

ನಿನ್ನೆಯ ನೆನಪುಗಳ, ನಾಳೆಯ ಕನಸುಗಳ ನಡುವೆ
ಇಂದಿನ ನಡೆಯೇ ಮರೆತು ಹೋಗಬೇಕೆ ?!

ನಿನ್ನೆ ಮರೆತದ್ದು ಇಂದು, ಇಂದಿನದು
ನಾಳೆ ನೆನಪಾಗುವುದೋ ಮತ್ತೆ!

"ನೆನಪು ಮರೆವು"ಗಳ ಆಟದಲಿ ಹೊಸಕನಸುಗಳ
ಕಟ್ಟಿಕೊಂಡು ಸಾಗಿಹುದು ಜೀವನ ಮುಂದೆ !!

PS : ಹಾಳು ಮರೆವು, ನೆನಪಿನ ಬಗ್ಗೆ ಬರೆಯಬೇಕೆಂದುಕೊಂಡಿದ್ದೆ !!

5/17/09

ಸುಖ

ಅಲ್ಲೊಂದು ಊರು. ಊರ ಪಕ್ಕದಲ್ಲೊಂದು ನದಿ. ಹರಿಯುವ ನದಿಯ ಅಲೆಯೇರಿ ಸುಖವು ಆಗಗ್ಗೆ ಆ ಊರಿಗೆ ಬಂದು ನೆಲೆ ನಿಲ್ಲದೆ ಹೊರಟು ಹೋಗುತ್ತಿತ್ತು. ಸುಖವನ್ನು ಹಾಗೆ ಹರಿಯ ಬಿಡುವುದು ಊರ ಮಂದಿಗೆ ಸರಿ ಕಾಣಲಿಲ್ಲ. ಅವರೆಲ್ಲರು ಸೇರಿ ಹರಿಯುವ ನದಿಗೆ ಅಣೆಕಟ್ಟು ಕಟ್ಟಿದರು, ಸುಖವನ್ನು ಸ್ಥಿರಗೊಳಿಸಲು. ಕಟ್ಟಿದ ಅಣೆಕಟ್ಟು ಏರಿ ಇಳಿಯುವ ಅಲೆಗಳನ್ನು ಕಟ್ಟಿ ಹಾಕಿತು. ಈಗ ಜನ ಅಲೆಗಳಿಗಾಗಿ ಅಲೆದಾಡುತ್ತಿದ್ದಾರೆ, ಹಾಗೆ ಅಲೆಯೇರಿ ಬರುತ್ತಿದ್ದ ಸುಖಕ್ಕಾಗಿಯೂ ಕೂಡ !!

-ಸಂK