Pages

3/6/21

ಸಂತಸವ ಹುಡುಕುತ್ತಾ....

ಹುಡುಕುತ್ತ ಹೊರಟೆ ಸಂತಸವ,
ಎಂ.ಟಿ.ಆರ್, ಸಿ.ಟಿ.ಆರ್, ಜನತಾ
ವಿದ್ಯಾರ್ಥಿ ಭವನ, ಮೈಲಾರಿಯ ದಾರಿಯಲಿ.
ಕಂಡುಕೊಂಡೆ ಸಂತಸವ - ದೋಸೆಗಾಗಿ 
ಕಾಯುವ ಸರತಿ ಸಾಲಿನಲಿ!

ಹುಡುಕುತ್ತಾ ಹೊರಟೆ ಸಂತಸವ
ಕಬ್ಬನ್ ಪಾರ್ಕ್, ಲಾಲಬಾಗ್
ಕುಕ್ಕರಹಳ್ಳಿ , ಚಾಮುಂಡಿ ಬೆಟ್ಟದ ತಪ್ಪಲಲ್ಲಿ.
ಕಂಡುಕೊಂಡೆ ಸಂತಸವ - ನೇರ ನುಡಿ,
ನೇರನಡೆಯ ನಡಿಗೆಯಲಿ !

ಹುಡುಕುತ್ತಾ ಹೊರಟೆ ಸಂತಸವ
ಮೈಸೂರ ಮಲ್ಲಿಗೆ, ಮೂಕಜ್ಜಿಯ ಕನಸು
ನಾಕುತಂತಿ, ಜುಗಾರಿ ಕ್ರಾಸಿನಲಿ.
ಕಂಡುಕೊಂಡೆ  ಸಂತಸವ - ಕವಿ
ಹೃದಯದೊಡೆಗಿನ ಮಾತುಕತೆಯಲಿ!

ಕೆದಕುತ್ತಾ ಹೊರಟಾಗ ಅರಿತದ್ದು-
ದೋಸೆಗಾಗಿನ ಕಾಯುವಿಕೆಯ ರುಚಿ,
ಹಸಿರುಹಾಸಿನ ಮೇಲಣ ನಡಿಗೆ
ಕನ್ನಡಕಾವ್ಯದ ಮನನ..
ಈ ಎಲ್ಲದರದೊಳಗಿನ ಸಂತಸದ
ಸಾಮಾನ್ಯ ಅಂಶ - ನಾನೇ ನಾನೇ....! 


ನಿಜ ಸಂತಸಕೆ ದಾರಿ
ನಾನು ನನ್ನೊಳಗೆ ಇರುವುದೊಂದೆ!!


- ಸಂ.K


1/20/21

ಏಕಾಂಗಿಯಾಗೇ ನಡೆ ನೀ

ಕವಿ ರಬೀಂದ್ರನಾಥರ ಸ್ಫೂರ್ತಿಗೀತೆ "ಎಕ್ಲ ಚಲೋ ರೇ" ಹಾಡಿನಿಂದ ಪ್ರೇರಿತ ಅನುವಾದ.

"ಏಕಾಂಗಿಯಾಗೇ ನಡೆ ನೀ"

ನಿನ್ನ ಕರೆಗಾರು ಓಗೊಡದಿರೆ-
ಏಕಾಂಗಿಯಾಗೇ ನಡೆ ನೀ;

(ನಿನ್ನೊಡನೆ) ಯಾರು ನುಡಿಯದಿರೆ,  ಎಣಿಸದಿರು ನೀ ನಿರ್ಭಾಗಿಯೆಂದು ;
(ನಿನ್ನೊಡನೆ) ಯಾರು ನುಡಿಯದಿರೆ,  ಎಲ್ಲರೂ ದೂರ ನಡೆದೆಡೆ, ಎಲ್ಲರೂ (ನುಡಿಯಲು) ಅಂಜಿದರೆ,
ತೆರದ ಎದೆಯಲಿ ಹಿಂಜರಿಯದೆ ನುಡಿ ನಿನ್ನ ಮನದೊಡನೆ

ಎಲ್ಲರೂ ದೂರ ಹೋದಲ್ಲಿ,ಓ  ನಿರ್ಭಾಗಿಯೇ, ಎಲ್ಲರೂ ದೂರ ಹೋದೆಡೆ
ಊಹೆಗೆಟುಕದ ನಿನ್ನೀ ಹಾದಿಯಲಿ ಯಾರು ತಿರುಗಿ ನೋಡದಿರೇ, 
ಹೊರಟು ಬಿಡು ಮುಳ್ಳಿನಪಥದಲಿ ನೆತ್ತರ ಲೆಕ್ಕಿಸಿದೆ, 
ಏಕಾಂಗಿಯಾಗೇ ನಡೆ ನೀ


ಯಾರು ಬೀರದಿರೆ ಬೆಳಕ ನೀ ನಡೆಯುವೆಡೆಗೆ, ಓ ನಿರ್ಭಾಗಿಯೇ,  
ಕಗ್ಗತ್ತಲ ರಾತ್ರಿ ಗುಡುಗಿನೊಡನೆ ಮುಸಲಧಾರೆಯ ತಂದಿತ್ತೆಡೆ-
ಮಿಂಚು ಹೊತ್ತಿಸಲಿ ಬೆಳಕಿನ ಕಿಡಿಯ ನಿನ್ನಲಿ, ಬೆಳಗಲಿ ನೀ ನಡೆವ ಹಾದಿಯ;

ನಿನ್ನ ಕರೆಯನಾರು ಗಮನಿಸದಿರೆ,
ಏಕಾಂಗಿಯಾಗೇ ನಡೆ ನೀ ;


ಅನುವಾದ : ಸಂK (ಸಂತೋಷ್ ಮೂಗೂರ್)

--------------------------------------------------    

ಮೂಲ ಕವನ ಮತ್ತು ಇಂಗ್ಲೀಷ್ ಅನುವಾದ : ರಬೀಂದ್ರನಾಥ ಟ್ಯಾಗೋರ್

If there is no-one responding to your call - then go on alone

If no-one speaks (to you), don't think you are unfortunate, if no-one speaks (to you),
If everyone turns away, if everyone fears (to speak), then with an open heart without hesitation speak your mind alone 

If everyone walks away, O unlucky one, everyone walks away
If no-one looks back towards the (your) unpredictable path, then with thorn pricked (of the path) bloodied feet, walk alone
If no-one heeds your call - then walk alone 

If no-one shines a light (on the path), O unlucky one,
If the dark night brings thunder and storm at the door - then let the lightning ignite the light in you alone to shine on the path 

If no-one heeds your call - then walk alone 

10/11/20

ಮಂಗಳಮುಖಿ ಮಂಗ!

ಜೀವಚರಿತ್ರೆಯಲ್ಲಿ 

ಮಂಗನಿಂದ ಮಾನವ...

ಮಂಗನಿಂದ ಮಾನವ ..

ಕೇಳಿ ಕೇಳಿ ಸಾಕಾಗಿತ್ತು

ಮಾನವ ಜೀವ ಬೇಸತ್ತಿತ್ತು


ಬದಲಾಯಿಸಬೇಕು

ಜಗದ ಭವಿಷ್ಯವ ಎನ್ನೋ ಹಂಬಲ

"ಮಂಗಳನ ಅಂಗಳದಲ್ಲಿ ಮಾನವ

ನೆಂದು ಬರೆದಿಡ ಬೇಕು" 

ನಿರ್ಧಾರ ಅಚಲವಾಗಿತ್ತು..                                                    

ಸರ್ಕಾರದ ಸಮ್ಮತಿಯು ದೊರಕಿತ್ತು

ಮೊದಲ ಹೆಜ್ಜೆ...ಇಟ್ಟಾಗಿತ್ತು

ಈ ಮಂಗಳವಾರ...ಶುಭದಿನ!


ಎಲ್ಲ ಗ್ರಹಗಳು ಕೂಡಿ

ಬಂದಿದ್ದರಿಂದಲೋ ಏನೋ..

ಇಂದು ರಂಗಣ್ಣ , ರಾಧಕ್ಕರೂ

ಕೂಡ ಇದರದ್ದೇ ಚರ್ಚೆ

ಮಂಗಳನೆಡೆಗೆ ಮಾನವ...

ಮಂಗಳನೆಡೆಗೆ ಮಾನವ...

ಬೇರೆ ಬ್ರೇಕಿಂಗ್ ನ್ಯೂಸ್ಗಳ ಭರಾಟೆಇಲ್ಲ.. 

ಕೋವಿಡ್ ಗೋಳು, ರಾಗಿಣಿ ರಾಗ, ಬಂಡೆಯ ಮೇಲೆ ದಾಳಿ 

ಎಲ್ಲಕ್ಕೂ ಒಂದು ಚಿಕ್ಕ ಬ್ರೇಕ್!

ನೇರ ದಿಟ್ಟ ನಿರಂತರ ವರದಿ ಭವಿಷ್ಯದೆಡೆಗೆ...


ಜಾಹೀರಾತುಗಳ ಗೋಡೆಯನ್ನು ದಾಟಿ

ಇನ್ನೇನೂ ಮಂಗಳನ ಅಂಗಳ ತಲಪಿಯೇ ಬಿಡುವಷ್ಟರಲ್ಲಿ

ಜಿಗಿ ಜಿಗಿ ಮಳೆ ಗುಡುಗು ಸಿಡಿಲು 

ಕೈ ಕೊಟ್ಟ ಕರೆಂಟ್...

ಹಾಳು ಸರ್ಕಾರ...ಯಾವುದಾದ್ರು ಸರಿಯಾಗಿ ಮಾಡಿದ್ದುಂಟೆ?


ಹೊರಬಂದು ನೋಡಿದರೆ

ಮುಸ್ಸಂಜೆಯ ಮುಗಿಲು, ಚದುರಿದ ಮೋಡಗಳು, ಜಟಿ ಜಟಿ ಮಳೆ, ಮಣ್ಣ ವಾಸನೆ ಎಲ್ಲವೂ ಹಿತವೇ...

ತಲೆಯೆತ್ತಿದರೆ ಎದರು ಮನೆ ಡಿಶ್ ಮೇಲೆ ಆರಾಮಾಸನದಲ್ಲಿ ಕುಳಿತ ಮಂಗ... ಮೊಗದಲ್ಲೊಂದು ಮುಗುಳುನಗೆ ಮಿಂಚಿದಂತಾಯ್ತು


ಕರೆಂಟ್ ಬಂತೆಂದು ಮತ್ತೆ ಒಳ ಓಡಿದರೆ

ಅಷ್ಟರಲ್ಲೇ ಶುರುವಾಗಿತ್ತು ಮತ್ತೊಂದು ಬ್ರೇಕಿಂಗ್ ನ್ಯೂಸ್ನ ಅಬ್ಬರ

ಮಂಗಳಮುಖಿ ಮಂಗ...!!

ಮಂಗಳಮುಖಿ ಮಂಗ...!!

- ಸಂK


(ವಾಟ್ಸಾಪ್ ಫಾರ್ವಾರ್ಡ್ ಫೋಟೋದಿಂದ ಪ್ರೇರಿತ)




4/30/20

ನೆರಳೂ ನನ್ನದಲ್ಲ !

ದೀಪದ ಕೆಳಗೆ ಕತ್ತಲೆ
ಬೆಳಕಿದ್ದರಷ್ಟೆ ನೆರಳು!

ಬೆಳಕಿನೆಡೆಗೆ ಹೊರಟರೆ ಹಿಂದೆ,
ಬೆಳಕಿಂದ ದೂರ ಸರಿದರೆ ಮುಂದೆ!

ಬೆಳಕ ಹತ್ತಿರ ಹೋದಷ್ಟೂ  ದೊಡ್ಡದು
ಬೆಳಕಿಂದ ದೂರ ಸರಿದಷ್ಟೂ  ಚಿಕ್ಕದು!

ಬೆಳಕು ಹೆಚ್ಚಿದಷ್ಟು ಇನ್ನಷ್ಟು ಸ್ಪಷ್ಟ
ಬೆಳಕು ಮಾಸಿದಷ್ಟು ಅಸ್ಪಷ್ಟ!

ಆಗುವುದೆಲ್ಲವು ಬೆಳಕಿಂದಲೇ ಎನ್ನುವುದಾದರೆ
ನಾನು ನನ್ನದಾದರು ಏನು?
ನೆರಳೂ ನನ್ನಣತಿಯಲ್ಲಿ ಇಲ್ಲದಿರೆ?

ಬೆಳಕು ಬೇರೆ ನಾನು ಬೇರೆ
ಎಲ್ಲವೂ ಅದರಿಂದಲೇ
ನಾನು ನಿಮಿತ್ತ ಮಾತ್ರವೇ
ಎನ್ನುವಷ್ಟರಲ್ಲೇ
ಆ ಒಂದು ಕ್ಷಣ
ನಾನು ಇದ್ದು ....ಬೆಳಕೂ  ಇದ್ದು... ನೆರಳಿಲ್ಲದ ಆ ಕ್ಷಣ !!
ನಾನು ಬೆಳಕ ಸೇರಿ ಒಂದಾಗಿ
ನೆರಳ ಮೀರಿದ ಆ ಕ್ಷಣ !!
ಅಳಿದದ್ದು ಏನು? ಉಳಿದದ್ದು ಏನು?
ಎನ್ನೋ ಜಿಜ್ಞಾಸೆ ಮೀರಿದ ಆ ಕ್ಷಣ...
ಅದುವೇ ...
ಹೃದಯ ಕಮಲವರಳುವ ಕ್ಷಣ!

4/27/20

ಅಂತರ

ನೇರ,ದಿಟ್ಟ
ನಿರಂತರ
ಒಂದರ ಪಕ್ಕದಲ್ಲೇ
ಒಂದಿದ್ದರು
ಎಂದು ಸೇರದ
ದೂರದಲ್ಲೆಲ್ಲೋ
ಸೇರಿದಂತೆ ಕಂಡರು
ದೂರವೇ ಉಳಿಯುವ

ಅಂತರ ಕಾಪಾಡಿಕೊಂಡೆ
ಅಂತರಂಗ ಹಂಚಿಕೊಂಡ
ದೂರ ಕಾಯ್ದುಕೊಂಡೆ
ಹತ್ತಿರವಾಗುಳಿದ
ಜಗದ ಹೊರೆ ಹೊತ್ತು
ನಡುವೆ ಅಂತರವಿರಲಿ
ಎಂದು ಮೌನದಿಂದುಳಿದ

ಆ ಹಳಿಗಳು
ಇನ್ಯಾವುದೋ
ಹೃದಯಗಳ ನೆನಪಿಸಿದರೆ
ನಿಟ್ಟುಸಿರ ಬಿಟ್ಟು
ಸುಮ್ಮನಿದ್ದು ಬಿಡಿ
"ನಡುವೆ ಅಂತರವಿರಲಿ"


4/11/20

ಮೌನದ ಮಾತು

ಆಡದ ಮಾತುಗಳೂ ಕಾಡುವುದು
ಮೌನ ಮಾತಾದಾಗ!

ಅದೇನು ಹೇಳುವಿರಿ ನೀವು
"ಮೌನ ಮಾತಾಗುವುದೇ?"

ಯಾಕೆ? ಕೇಳಲಿಲ್ಲವೇನು?
ಎಂದು ಬಾಯಿಬಿಡದ
ಅಮ್ಮನ ಪ್ರೇಮದ
ಮನದಾಳದ ಮಾತುಗಳು

ಯಾಕೆ? ಕಾಣಲಿಲ್ಲವೇನು
ಅಪ್ಪನ ಶಿಸ್ತು ಕೋಪದ
ಒರಟು ನಡೆಯ ನಡುವೆ
ಕೇಳಿಸದ ಮಾತುಗಳು

ಯಾಕೆ? ಕೇಳಿಲ್ಲವೇನು
ವಟಗುಟ್ಟುವ ಅವನ
ಹಂಬಲಿಕೆಯ ನಡುವಿನ
ಪಿಸುಮಾತಗಳು

ಹೋಗಲಿ ಬಿಡಿ..

ಯಾಕೆ? ಕೇಳಿಸಲಿಲ್ಲವೇ
ನಿಮಗೆ ನಿಮ್ಮದೇ
ಮನದಲ್ಲಿ ನಡೆವ
ತುಮುಲಗಳು
ಅದರ ...ಶಬ್ದಗಳು..

ಹಾಗಾದರೆ...
ಅಕ್ಕ ಹೇಳಿದ ಹಾಗೆ
ಹುಡಕಬೇಕಿದೆ
"ನಿಶ್ಯಬ್ದದೊಳಗಿನ ಶಬ್ದ"ವ...
"ಮೌನದೊಳಗಿನ ಮಾತು"
ಕೇಳಲು!

ಹುಡುಕಿದಂದು
"ಮಾತು ಬೆಳ್ಳಿ ಮೌನ ಬಂಗಾರ"ವಾದೀತು !!
ಮೂಡುವುದಾಗ
ಬಂಗಾರದ (ಮೌನದ) ಮಾತು  !

5/21/13

ಬದ್ನೆಕಾಯಿ ಬಜ್ಜಿ ಮತ್ತು ...............



ಬದನೆಕಾಯಿ ಬಜ್ಜಿ ಮಾಡಲು ಮುಖ್ಯವಾಗಿ ಬೇಕಾದ್ದು ಬದನೆಕಾಯಿ...ಗುಂಡು ಬದ್ನೆ ಕಾಯಿ !!   ಗುಂಡು ಬದನೆಕಾಯಿಯನ್ನು ತೆಳ್ಳಗೆ ಬಿಲ್ಲೆಯ ಆಕಾರದಲ್ಲಿ ಕೊಯ್ದಿಟ್ಟು ಕೊಳ್ಳುವುದು.  ಕೊಯ್ದಿಟ್ಟ ಬದ್ನೆಕಾಯಿಯನ್ನು ಬೇರೆಲ್ಲ ಬಜ್ಜಿ ಮಾಡುವ ಹಾಗೆ, ಕಲಸಿಟ್ಟು ಕೊಂಡ ಕಡಲೆಹಿಟ್ಟು ( ರುಚಿಗೆ ತಕ್ಕಷ್ಟು ಉಪ್ಪು,ಕಾರ ಬೇರೆಸಿದ್ದು ) ನಲ್ಲಿ ಅದ್ದಿ ಕುದಿಯುತ್ತಿರುವ ಎಣ್ಣೆಯಲ್ಲಿ ತೇಲಿ ಬಿಡುವುದು. ತೇಲಿಬಿಟ್ಟ ಕಡಲೆಹಿಟ್ಟು ಲೇಪಿತ ಬದ್ನೆಕಾಯಿ ಕೆಂಬಣ್ಣ ತಿರುಗುವವರೆಗೆ ಕಾದಿದ್ದು ಎಣ್ಣೆಯ ಬಾಣಲಿಯಿಂದ ತೆಗೆದು ಬೇರೆ ಪಾತ್ರೆಗೆ ಹಾಕಿಕೊಳ್ಳುವುದು. ಇನ್ನೇನಿದ್ದರು ತಿನ್ನಲು ಸಾಧ್ಯ ಎನಿಸುವಷ್ಟು ಬಿಸಿ ಆರುವವರೆಗಿನ ಕಾಯುವಿಕೆ :-).

ಸರಳವಾಗಿ ಹೇಳುವುದಾದರೆ ಸಾಕಷ್ಟು ಕಾಯಿಸಿದ ಎಣ್ಣೆಯಲ್ಲಿ ಹಿಟ್ಟಿನಲ್ಲಿ ಅದ್ದಿದ ಬದ್ನೆಕಾಯ್ ಬಿಲ್ಲೆಯನ್ನು ಕೆಂಪಾಗುವವರೆಗೆ ಕಾಯಿಸಿ ನಂತರ ಬಾಯಿಗೇರಿಸಲು ಬಿಸಿ ಆರಲೆಂದು ಕಾಯುತ್ತಾ ಕೂರುವುದು:-)

ಓಹೋ ಮರೆತಿದ್ದೆ ಮೇಲೆ ಹೇಳಿದಷ್ಟೆ ಮಾಡಿದರೆ ಬದನೆಕಾಯಿ ಬಜ್ಜಿ ಹೆಚ್ಚು ರುಚಿಸದೆ ಇರಬಹುದು. ಬದ್ನೆ ಕಾಯಿ ಬಿಲ್ಲೆಯನ್ನು ಕಡಲೆ ಹಿಟ್ಟಿನಲ್ಲಿ ಅದ್ದುವ ಮೊದಲೆ ಖಾರವಾದ ಚಟ್ನಿಯನ್ನು ಲೇಪಿಸಬೇಕು. ಖಾರ ಎಷ್ಟಿರಬೇಕು ಅದು ನಿಮ್ಮ ನಾಲಗೆಯ ರುಚಿಗೆ ಬಿಟ್ಟಿದ್ದು :)

ಕರಿಬೇವು, ಕೊತ್ತಂಬರಿ, ಪುದಿನ, ಜೀರಗೆ, ಹಸಿಮೆಣಸಿನಕಾಯಿ ಮತ್ತು ಉಪ್ಪನ್ನು ಬಳಸಿಕೊಂಡು ಚಟ್ನಿಯನ್ನು ತಯಾರಿಸಿಕೊಳ್ಳಬಹುದು. ಹಸಿಮೆಣಸಿನಕಾಯಿ ಮತ್ತು ಜೀರಿಗೆಯನ್ನು ಎಣ್ಣೆಯಲ್ಲಿ ಕೆಂಪಾಗುವವರೆಗೆ ಹುರಿದು ಕೊಂಡು...ನಂತರ ಕರಿಬೇವು, ಕೊತ್ತಂಬರಿ, ಪುದಿನ ಸೊಪ್ಪಿನೊಂದಿಗೆ ಅರೆದು ಕೊಳ್ಳಿ. ಅರೆದು ಕೊಳ್ಳುವಾಗ ಬೇಕಾಗುವಷ್ಟು ಉಪ್ಪು ...ಬೇಕೆನಿಸಿದರೆ ಬೆಳ್ಳುಳಿ ಬೆರೆಸಿಕೊಳ್ಳಿ. ಚಟ್ನಿಗೆ ಹಾಕುವ ಪದಾರ್ಥಗಳಲ್ಲಿ ಮತ್ತು ಅಳತೆಯಲ್ಲಿ ಪ್ರಯೋಗಮಾಡಿದರೆ ಬದ್ನೆ ಕಾಯಿ ಬಜ್ಜಿ ಮತ್ತಷ್ಟು ರುಚಿಗಟ್ಟಬಹ್ದು...ಇಲ್ಲವೇ ರುಚಿ ಕೆಟ್ಟ ಬಹುದು !

ಇಷ್ಟೆಲ್ಲ ಮಾಡಿದ ಮೇಲೆ ಬದ್ನೆ ಕಾಯಿ ಬಜ್ಜಿ ಹೆಚ್ಚು ರುಚಿಸುತ್ತದೆ ಹಾಗೂ ನಿಮಗೆ ಇಷ್ಟವಾಗುತ್ತದೆ ಅಂದರೆ ತಪ್ಪಾದೀತು....

ನನ್ನ ವಿಚಾರವನ್ನೆ ತೆಗೆದು ಕೊಂಡರೆ ...ಮೊನ್ನೆ ಮೊನ್ನೆ ತಾನೆ ಗದಗಿಗೆ ಹೋಗಿದ್ದೆ. ಅಲ್ಲಿನ ಸ್ಟೇಷನ್ ರಸ್ತೆಯಲ್ಲಿ ತಿಂದ ಬದ್ನೆ ಕಾಯಿ ಬಜ್ಜಿ ಬಹಳ ರುಚಿಸಿತು. ಅದಕ್ಕೆ ಕಾರಣ ಜೊತೆಯಲ್ಲಿದ್ದ ಗೆಳೆಯರು, ಗದಗಿನ ವಾತಾವರಣ, ಲಕ್ಕುಂಡಿಯಲ್ಲಿ ಕಣ್ತುಂಬಿಕ್ಕೊಂಡ ಚಾಲುಕ್ಯರ ಕಾಲದ ಶಿಲ್ಪಗಳು, ಅಡವೇಶ ವಿವರಿಸಿದ ಕಲೆಯ ಹಿಂದಣ ಚರಿತ್ರೆ, ಗದುಗಿನ ನಾರಾಯಣನ ಚೆಲುವು ಮತ್ತು ಕಿವಿಯಲ್ಲಿ ಹಾಡಿಕೊಳ್ಳುತ್ತಿದ್ದ ಕುಮಾರವ್ಯಾಸನ ಸಾಲುಗಳು...ಇವೆಲ್ಲವು ಬಜ್ಜಿಗೆ ರುಚಿಯನ್ನು ಎಷ್ಟು ಹೆಚ್ಚಿಸಿದವು ಅಂದ್ರೆ .. ನನ್ನ ಬಳಿ ಅಳೆದು ಸುರಿದು ಹೇಳುವ ಸಾಧನವಿಲ್ಲ. ಹಾಗೆ ಇದೆಲ್ಲವನ್ನು ಬದ್ನೆಕಾಯಿ ಬಜ್ಜಿಗೆ ಎಷ್ಟು ಪ್ರಮಾಣದಲ್ಲಿ ಸೇರಿಸಿಬೇಕು ಅಂತ ಹೇಳಲು ನನ್ನಿಂದ ಸಾಧ್ಯವಿಲ್ಲ. ಇಷ್ಟು ಮಾತ್ರ ಹೇಳಬಲ್ಲೆ...ಕಾವ್ಯ ಮತ್ತು ತಿನಿಸು ರುಚಿಸುವುದಕ್ಕೆ ಒಂದು ಸುಂದರವಾದ ವಾತಾವರಣದ ಹಿನ್ನಲೆಯಲ್ಲಿರಬೇಕು. ಅಸ್ವಾದಿಸುವ ವಾತಾವರಣವನ್ನು ನಿರ್ಮಾಣ ಮಾಡಿಕೊಳ್ಳ ಬೇಕಾದ್ದು ನಾವೇ, ಬಜ್ಜಿ ಮಾಡುವುದಕ್ಕಿಂತ ಮುಂಚೆ ಅದನ್ನು ಸಿದ್ದ ಪಡಿಸಿಕೊಳ್ಳುವುದನ್ನು ಮರೆಯದಿರಿ !! 

ನಾಲಗೆ ನೀರೂರುವಂತೆ ಮಾಡಿ ಬಹಳ ದಿನಗಳಿಂದ ಏನನ್ನು ಬರೆಯದೆ ಬರಡಾಗಿದ್ದ ನನ್ನೊಳಗಿನ ಬರಹಗಾರನನ್ನು ಮತ್ತೆ ಬಡಿದೇಳಿಸಿದ ಗದಗಿನ ಬದ್ನೆ ಕಾಯಿ ಬಜ್ಜಿಗೂ ಮತ್ತು ಮೇಲೆ ಹೇಳಿದ ರುಚಿಗಟ್ಟಿಸಿದ ವಾತಾವರಣಕ್ಕೂ ಒಂದು ಸಲಾಮ್.

ಅಡಿಟಿಪ್ಪಣಿ : ಬರಹದಲ್ಲಿ ಬಳಸಿಕೊಂಡಿರುವ ಚಿತ್ರಗಳು ಗದಗಿನ ಸ್ಟೇಷನ್ ರಸ್ತೆಯ ಬಜ್ಜಿಯಂಗಡಿಯಲ್ಲಿ ಗೆಳೆಯ ಕಾರ್ತಿಕ ತೆಗೆದದ್ದು.

3/16/10

"ಯಾರೊಡನೆಯು ಹೇಳುವುದಿಲ್ಲ ತಾನೆ ಇದನು ?!" ಎಂದು ಸ್ನೇಹಿತರ ಕೇಳುವ ವಿಧಿ ಕಾಡದಿರಲಿ;
ಆ ಪ್ರಶ್ನೆಯನೆ ಪ್ರಶ್ನಿಸುವಷ್ಟು ಸ್ನೇಹವಿರಲಿ ಸ್ನೇಹಿತರಲಿ, ನಂಬುಗೆಯರಲಿ ಅವರ ಸ್ನೇಹದಲಿ !! -ಸಂK

(inspired by sms - Trust ur friend that much that u Dont have to tell, ‘Dont tell dis 2 anyone’)

ಹೊಸ ಯುಗದ ಆದಿ

ವಿಕೃತಿಗಳನಡಗಿಸುವ,
ವಿಕೃತಿಗಳಳಿದ ಹೊಸ ಯುಗದ ಆದಿಗೆ ನಾಂದಿ ಹಾಡುವ;
ಸುಕೃತಿಗಳನೆಸಗುವ,
ಸುಕೃತಿಗಳನೆಸಗಿ ಜಗದಿ ಸಿರಿಸೊಬಗ, ನಗು ನಲಿವ ಹರಸುವ ! - ಸಂK

10/1/09

ಗಾಂಧಿ.. ಎಂಬ ಮನಸ್ಥಿತಿ !



ಮೊದಲ ಬಾರಿಗೆ "ಗಾಂಧಿ" ಎನ್ನುವ ಹೆಸರನ್ನು ಅಥವಾ ಪದವನ್ನು ಕೇಳಿದ್ದು ಯಾವಾಗ ಅನ್ನೋದು ನೆನಪಿಗೆ ಬರ್ತಾ ಇಲ್ಲ. ಅಷ್ಟು ಹಳತಾಗಿ ಹೋಗಿದೆ "ಗಾಂಧಿ" ಎಂಬ ಪದ ಬದುಕಿನಲ್ಲಿ. ಮೋಹನ ದಾಸ ಕರ್ಮಚಂದ್ ಗಾಂಧಿ "ಮಹಾತ್ಮ ಗಾಂಧಿ"ಯಾಗಿ "ಮಹಾತ್ಮ"ರಾಗಿ ಕೊನೆಗೆ ಗಾಂಧಿಯಾಗಿ ಯಾವಾಗ ಹೇಗೆ ರೂಪಾಂತರಗೊಂಡರೋ ಗೊತ್ತಿಲ್ಲ.ಇಂದು ಗಾಂಧಿ ಒಬ್ಬ ವ್ಯಕ್ತಿಯಾಗಿ ಉಳಿದಿಲ್ಲ. "ಗಾಂಧಿ" ಒಂದು ಮನಸ್ಥಿತಿಯಾಗಿ ಬಿಟ್ಟಿದೆ....ಶಾಂತಿ-ಅಹಿಂಸೆಗಳೆಂಬ ಕಲ್ಪನೆಗಳಿಗೆ ಬಣ್ಣಕಟ್ಟುವ, ಅದನ್ನು ಮೂರ್ತರೂಪಕ್ಕೆ ಇಳಿಸುವ, ಸತ್ಯಂ ಶಿವಂ ಸುಂದರಂ ಅನ್ನುತ್ತಾ ಸತ್ಯದಲ್ಲಿ ಸೌಂದರ್ಯವನ್ನು ಹಾಗೂ ಶಿವನನ್ನು ಕಾಣುವ, ವ್ಯಕ್ತಿಗಿಂತ ವಿಚಾರಗಳನ್ನು ಆದರಿಸುವ, ಅಂದು ಕೊಂಡದ್ದನ್ನು ಸಾಧಿಸಿಯೇ ತೀರಿಸುವ, ಸಾಮಾನ್ಯ ಮಹಾತ್ಮನಾಗುವ "ಅಸಾಮಾನ್ಯ" ಮತ್ತು "ತನ್ನೊಳಗಿನ ಮಹಾತ್ಮ"ನ ಮುಂದೆ ತಾನೆ ಸಾಮಾನ್ಯನಾಗಿ ಬಿಡುವ, ಕೊನೆಗೆ ಎಲ್ಲರಿಗೂ ಸಹಾಯಮಾಡ ಹೊರಟು ತಾನೆ ಅಸಹಾಯಕನಾಗಿ ಬಿಡುವ "ಮನಸ್ಥಿತಿಗೊಂದು ಪದ"ವಾಗಿಬಿಟ್ಟಿದೆ. "ಗಾಂಧಿ ಎಂಬ ಮನಸ್ಥಿತಿ"ಯ ತಲಪುವ ಕ್ರಿಯೆಯಲ್ಲಿ ಪ್ರತಿಯೊಬ್ಬನಿಗೂ ಒಬ್ಬಬ್ಬ ಗಾಂಧಿ ಕಂಡುಬರುತ್ತಿದ್ದಲ್ಲಿ ಆಶ್ಚರ್ಯವೇನು ಇಲ್ಲ. ಈ ದಿನ ಪ್ರತಿಯೊಬ್ಬರು ಗಾಂಧಿಯೆಂಬ ವ್ಯಕ್ತಿಯ ಕುರಿತು ಅವರವರದೇ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದರೆ ಅದು "ಗಾಂಧಿ ಎಂಬ ಮನಸ್ಥಿತಿ"ಯ ಒಂದು ಪ್ರಕಟಿತ ರೂಪ ಅಷ್ಟೇ !!

ಗಾಂಧಿಯೆಂಬ ಮನಸ್ಥಿತಿಯ ಕಲ್ಪನೆಯ ಮೂರ್ತರೂಪ - ಗಾಂಧಿಯ ಜನ್ಮ ದಿನ ಇಂದು. ನನ್ನ ಕಡೆಯಿಂದ ನಮನ- ಗಾಂಧಿಗೆ, "ಗಾಂಧಿ... ಎಂಬ ಮನಸ್ಥಿತಿಗೆ" !!

8/1/09

ಮರೆವು

೧. ಈ ಮರೆವೆನ್ನುವುದೆ ಹೀಗೆ..
ಕಳಚಿಬಿದ್ದ ಮೊಳೆಯ ಗುರುತ
ಮುಚ್ಚುವ ಸುಣ್ಣದ ಹಾಗೆ;
ಎಷ್ಟಿದ್ದರು ಒಳಗಿರುವ ನೋವು
ಮುಚ್ಚಿ ಬಿಡುವುದು ಹೊರಗೆ ಕಾಣದ ಹಾಗೆ !

೨. ಹಳೆಯ ನೋವುಗಳ ತೆರಯ ಮರೆಗೆ ಕಳಿಸುವ
ಹೊಸಕನಸುಗಳಿಗೆ ದಾರಿ ಸುಗಮಗೊಳಿಸುವೀ ಮರೆವು;
ಬಣ್ಣಗೆಟ್ಟಿದ್ದ ಆಗಸದಲ್ಲಿ ಕಾಮನಬಿಲ್ಲ ಕಟ್ಟುವ
ಮಧ್ಯಾಹ್ನದ ಮಳೆಯ ಮುಂಚಿನ ಮೋಡದ ಹಾಗೆ !!

ನೆನಪು

೧. ಈ ಸಣ್ಣ ಸಣ್ಣ ನೆನಪುಗಳೆ ಹೀಗೆ..
ಗೋಡೆಯ ಮೇಲಿನ ಸಣ್ಣ ಮೊಳೆಯ
ದೊಡ್ಡ ನೆರಳಿನ ಹಾಗೆ,
ಒಳಗಿಳದಿದ್ದಕ್ಕಿಂತ ಹೊರಗ್
ಹರಡಿದ್ದೆ ಹೆಚ್ಚು !

೨. ಭೂತಕಾಲದ ಭವ್ಯತೆಯ ಬೆರಗಿನಲ್ಲಿ ಮುಳುಗಿಸುವ
ಭವಿಷ್ಯಕ್ಕೆ ಬಣ್ಣಬಣ್ಣದ ನೆನಪುಗಳ ಸೃಷ್ಟಿಸುವ ಈ ನೆನಪು...
ತಾನು ಕಪ್ಪುಬಿಳುಪಿನಲ್ಲಿದ್ದರು ವರ್ತಮಾನಕ್ಕೆ ಬಣ್ಣಕಟ್ಟುವ
ಮಧ್ಯಾಹ್ನದ ಮಳೆಯ ನಡುವಿನ ಕಾಮನಬಿಲ್ಲಿನ ಹಾಗೆ !!

ನೆನಪು !

ಇನ್ನೂ ನಿನ್ನೆಯದೆ ನೆನಪುಗಳು,
ನಾಳೆಯದೆ ಹಗಲುಗನಸಗಳು..
ಛೇ! ಇಂದೇ ಮರೆತು ಹೋಗಬೇಕೆ ?

ನಿನ್ನೆಯೂ ನೆನಪಿತ್ತು..
ನಾಳೆ ಮತ್ತೆ ನೆನಪಾಗಬಹುದೇನೋ..
ಇಂದೆ ಮರೆತುಹೋಗಬೇಕೆ ? ಹಾಳು ಮರೆವು..

ನಿನ್ನೆಯ ನೆನಪುಗಳ, ನಾಳೆಯ ಕನಸುಗಳ ನಡುವೆ
ಇಂದಿನ ನಡೆಯೇ ಮರೆತು ಹೋಗಬೇಕೆ ?!

ನಿನ್ನೆ ಮರೆತದ್ದು ಇಂದು, ಇಂದಿನದು
ನಾಳೆ ನೆನಪಾಗುವುದೋ ಮತ್ತೆ!

"ನೆನಪು ಮರೆವು"ಗಳ ಆಟದಲಿ ಹೊಸಕನಸುಗಳ
ಕಟ್ಟಿಕೊಂಡು ಸಾಗಿಹುದು ಜೀವನ ಮುಂದೆ !!

PS : ಹಾಳು ಮರೆವು, ನೆನಪಿನ ಬಗ್ಗೆ ಬರೆಯಬೇಕೆಂದುಕೊಂಡಿದ್ದೆ !!

5/17/09

ಸುಖ

ಅಲ್ಲೊಂದು ಊರು. ಊರ ಪಕ್ಕದಲ್ಲೊಂದು ನದಿ. ಹರಿಯುವ ನದಿಯ ಅಲೆಯೇರಿ ಸುಖವು ಆಗಗ್ಗೆ ಆ ಊರಿಗೆ ಬಂದು ನೆಲೆ ನಿಲ್ಲದೆ ಹೊರಟು ಹೋಗುತ್ತಿತ್ತು. ಸುಖವನ್ನು ಹಾಗೆ ಹರಿಯ ಬಿಡುವುದು ಊರ ಮಂದಿಗೆ ಸರಿ ಕಾಣಲಿಲ್ಲ. ಅವರೆಲ್ಲರು ಸೇರಿ ಹರಿಯುವ ನದಿಗೆ ಅಣೆಕಟ್ಟು ಕಟ್ಟಿದರು, ಸುಖವನ್ನು ಸ್ಥಿರಗೊಳಿಸಲು. ಕಟ್ಟಿದ ಅಣೆಕಟ್ಟು ಏರಿ ಇಳಿಯುವ ಅಲೆಗಳನ್ನು ಕಟ್ಟಿ ಹಾಕಿತು. ಈಗ ಜನ ಅಲೆಗಳಿಗಾಗಿ ಅಲೆದಾಡುತ್ತಿದ್ದಾರೆ, ಹಾಗೆ ಅಲೆಯೇರಿ ಬರುತ್ತಿದ್ದ ಸುಖಕ್ಕಾಗಿಯೂ ಕೂಡ !!

-ಸಂK

3/10/09

ರಾಜೀನಾಮೆ

ಆ ದಿನಗಳಲ್ಲಿ (2007ರ ಮೇ ತಿಂಗಳು) ಆಫೀಸ್ ನಲ್ಲಿ ನಮ್ಮದೇ ರಾಜ್ಯವನ್ನು ಕಟ್ಟಿಕೊಂಡು ಆಳುತ್ತಿದ್ದ ಕಾಲ. ನಾವು ಏನು ಮಾಡಿದರು ಅದು ಸರಿ ಎಂಬ ಮನೋಭಾವ ದಿನೆ ದಿನೆ ( ನಿಜ ಹೇಳಬೇಕಂದರೆ ಕ್ಷಣೆ ಕ್ಷಣೆ ) ಹೆಚ್ಚಾಗುತ್ತಿದ್ದ ಕಾಲ. ಬೇರೆಲ್ಲರ ಮುಂದು ಬಡಬಡ ಮಾತಾಡಿಕೊಂಡು ನಾವು ನಮ್ಮನ್ನೆ self motivate ಮಾಡಿಕೊಳ್ಳುತ್ತಿದ್ದ ಕಾಲ ( motivate ಮಾಡಲು ಬೇರೆ ಯಾರು ಇರಲು ಇಲ್ಲ ಬಿಡಿ )! ಬೇರೆಯವರ ಮುಂದೆ ಎಷ್ಟೆ motivated ಅಂತ ತೋರಿಸಿಕೊಂಡರು "ಶಬ್ಧದೊಳೆಗಿನ ನಿಶ್ಯಬ್ಧ"( ಇಲ್ಲ ನಿಶ್ಯಬ್ಧದೊಳಗಿನ ಶಬ್ಧ ಅನ್ಕೊಳಿ )ದಂತೆ "de-motivate" ಆಗಿದ್ದ ದಿನಗಳು.ಬಹುಶಃ ಅದು 3Y Syndrome ಪ್ರಭಾವ ಇದ್ದರು ಇರಬಹುದು ! ಅಂತಹ ಸಂದರ್ಭದಲ್ಲಿ ನಡೆದ ಘಟನೆ ಇದು."Poetic Resignation" ಅನ್ನೋ ಕವಿತೆಯೊಂದು ಮೇ 10 ನೇ ತಾರೀಕಿನ ಸಂಜೆ ನನಗೆ forward mail ಮೂಲಕ ಬಂತು. ಮುಂಚೆಯು ಬಹಳಷ್ಟೂ ಸಾರಿ ಅದೆ mail ಬಂದಿದ್ದರು ಏನು ಅನ್ನಿಸಿರಲಿಲ್ಲ ( ಬಂದದ್ದೆ mail ಮತ್ತೆ ಮತ್ತೆ ಬರುವುದು ಏನು ಹೊಸತಲ್ಲ ಬಿಡಿ ...ಅದು ಜಗತ್ತು ಚಿಕ್ಕದು,ಭೂಮಿ ಗುಂಡಾಗಿದೆ,ನಾವು ಮನುಜರು ಸಮಾಜ ಜೀವಿಗಳು...,ನಾವು ಪರಿಸರವಾದಿಗಳು ಹಳತನ್ನೆ recycle ಮಾಡ್ತಾ ಇರ್ತೀವಿ ಅನ್ನೋದಕ್ಕೆ ಸಾಕ್ಷಿ :) ). ಆದ್ರೆ ಅವತ್ತು ಯಾಕೋ ಅದನ್ನ ಹಾಗೆ delete ( forward mail ಗಳ ಪಾಲಿಗೆ ಮೋಕ್ಷ ಪ್ರಾಪ್ತಿ ಮಾಡುವ ಕಾರ್ಯ ) ಮಾಡದೆ ಕನ್ನಡಕ್ಕೆ ಅನುವಾದಿಸಲೇ ಬೇಕೆಂದು ಹಟ ತೊಟ್ಟು ಕೂತು ಕನ್ನಡೀಕರಿಸಿದ್ದಾಯ್ತು. ಬಹುಷಃ ಆ ದಿನ ಹಾಗೆ ರಾತ್ರೋ ರಾತ್ರಿ ಹೀಗೆ ಕನ್ನಡೀಕರಿಸಿದ್ದರೆಂದಲೆ ನಾನೀಗಲು ಅದೆ ಕಂಪನಿಯಲ್ಲಿ ಕೆಲಸದಲ್ಲಿರುವುದು ಅಂದರೆ ತಮಗೆ ಅತಿಶಯೋಕ್ತಿಯಾಗಿ ಕಾಣಿಸಬಹುದು! ಸತ್ಯಾಸತ್ಯದ ವಿವೇಚನೆ ಈಗ ಬೇಡ ಬಿಡಿ. ಆ ದಿನದ ಭಾವನೆಗಳ ಸಾಕ್ಷಿಯಾದ್ದರಂದ ಕವನವನ್ನು(!) ಇನ್ನಷ್ಟು ಸುಂದರಗೊಳಿಸುವ ಅವಕಾಶವಿದ್ದರು ಹಾಗೆ ಮಾಡದೆ ಹಾಗೆಯೇ ಅಂದಿನ ರೂಪದಲ್ಲೆ ಇಲ್ಲಿಟ್ಟಿದ್ದೀನಿ. ಮೂಲ ಕವಿತೆ ಯಾರದು ಅನ್ನೋದು ತಿಳಿದಿಲ್ಲವಾದ್ದರಿಂದ ನಾನು ನನ್ನ ಕಾಪಿರೈಟ್ ( ರೈಟ್ ಟು ಕಾಪಿ ) ಬಳಸಿಕೊಂಡು ಅನುವಾದ ಮಾಡಿಬಿಟ್ಟಿದ್ದೇನೆ. ಮೂಲ ಲೇಖಕರಾರು ಅನ್ನೋದು ನಿಮಗ್ಯಾರಿಗಾದ್ರು ತಿಳಿದಿದ್ದರೆ ನನಗು ತಿಳಿಸಿ.

ಇಲ್ಲಿ ಬರೆದಿರುವುದಿರುವುದೆಲ್ಲವು ಯಾರನ್ನು ಉದ್ದೇಶಿಸಿಯಾಗಲಿ ದುರುದ್ದೇಶಿಸಿಯಾಗಲಿ ಬರೆದದ್ದಲ್ಲ, ಇವೆಲ್ಲವು ಕೇವಲ ಕಲ್ಪನ ಪ್ರಪಂಚದ ಕನವರಿಕೆಗಳು..ಇದ್ಯಾವುದು ಓರ್ವ ವ್ಯಕ್ತಿ,ವ್ಯವಸ್ಥೆಯನ್ನು,ಸಂಸ್ಥೆಯನ್ನು ಕುರಿತು ಬರೆದದ್ದಲ್ಲ. ಇದ್ಯಾವುದಕ್ಕು ಯಾವುದೆ ವಿಶೇಷ ಅರ್ಥವು ಇಲ್ಲ ...ಇದ್ದರೆ ಕೇವಲ ಸಾಹಿತ್ಯಕ ಚರ್ಚೆಗಳಿಗಸ್ಟೆ ಸೀಮಿತವಾದದ್ದು ಅಂತ ನಾನು ವಿಶೇಷವಾಗಿ ಹೇಳುವ ಅಗತ್ಯವಿಲ್ಲ ಎಂದು ಕೊಳ್ಳುತ್ತೇನೆ !

ಮೂಲ ಕವನ


ಕನ್ನಡೀಕರಿಸಿದ ಕವನ



ಇನ್ನು ಸಂತೋಷಾರ್ಥಗಳು :
೧. ಸಂತೋಷಾರ್ಥಗಳು - ಸಂತೋಷ ಸಂತೋಷಕ್ಕಾಗಿ ಕಲ್ಪಿಸಿಕೊಂಡ ಅರ್ಥಗಳು
೨. 3Y Syndrome - ಸಾಮಾನ್ಯವಾಗಿ ಯಾವುದೆ ಕಂಪನಿಯಲ್ಲಿ ಸುಮಾರು ಮೂರು ವರುಷ ಕಳೆದ ನಂತರ ಕಾಣಿಸಿಕೊಳ್ಳುವ ಲಕ್ಷಣಗಳು. ಕಂಪನಿಯ ಗುರುತ್ವಾಕರ್ಷಣ ಶಕ್ತಿವಲಯದ ಹೊರವಲಯದಲ್ಲಿ ನಿಂತು "ಕೆರೆ-ದಡ" ಆಡುವ ಮನಸ್ಥಿತಿ.
೩. ಕಾಪಿರೈಟ್ - ರೈಟ್ ಟು ಕಾಪಿ
೪. ಕನ್ನಡೀಕರಣ - ನಮ್ಮನ್ನು ನಾವು ಕಂಡುಕೊಳ್ಳುವ ಪ್ರಯತ್ನ ...ಕನಿಷ್ಟ ಪಕ್ಷ ಕನ್ನಡಿಯಲ್ಲಾದರು !( ಉದಾ: ನಿನ್ನ ಮುಖ ಕನ್ನಡೀಲಿ ನೋಡ್ಕೊಂಡಿದ್ದೀಯಾ ಅಂತಾ ಬಹಳಷ್ಟು ಜನ ಬಳಸ್ತಾರೆ,ಅರ್ಥ ಗೊತ್ತಿಲ್ಲ ಛೇ ಪಾಪ )
೫.ಕೆರೆ-ದಡ - ಚಿಕ್ಕವಯಸ್ಸಿನಲ್ಲಿ ನಾವೆಲ್ಲರು ಆಡುತ್ತಿದ್ದ ಆಟ...ಇವತ್ತು ಕಾರ್ಪೊರೆಟ್ ಪ್ರಪಂಚದಲ್ಲಿ ಬಹಳ ಚಾಲ್ತಿಯಲ್ಲಿರುವ ಆಟ. ವಿವರ ಇನ್ಯಾವಗಲಾದ್ರು ಕೊಡ್ತೀನಿ.
೬.ಲೇಖನದಲ್ಲಿ ನಾವು,ನಮ್ಮ ಪದಗಳ ಬಳಕೆ - self respect ಕೊಟ್ಟು ಕೊಳ್ಳುವ ಪರಿ or ಇನ್ನೊಬ್ಬ ಜೀವಿಯು ಇದಕ್ಕೆಲ್ಲ ಸಾಕ್ಷಿಯಾಗಿದ್ದ ಅನ್ನೋ ಕುತೂಹಲ ಹುಟ್ಟಿಸುವ ಪ್ರಯತ್ನ ( ಇನ್ನೊಬ್ಬನು ಇದ್ದ ಅಂದರೆ ನನ್ನೊಬ್ಬನನ್ನೆ ಜನ ಬಯ್ಯೋಲ್ಲ ಅನ್ನೋ ಧೈರ್ಯ!)

3/5/09

ದಿನಕ್ಕೊಂದು ಒಳ್ಳೆ ಕೆಲಸ !!

ನಾನು ಇವತ್ತು ಅಮ್ಮನಿಗೆ ತರಕಾರಿ ತಂದು ಕೊಟ್ಟೆ.
ನಾನು ಇವತ್ತು ಚಿಕ್ಕ ಹುಡುಗನೊಬ್ಬನನ್ನು ರಸ್ತೆ ದಾಟಿಸಿದೆ.
ನಾನು ಇವತ್ತು ಮನೆಯ ಮುಂದಿನ ಮೂಲಂಗಿ ಗಿಡಕ್ಕೆ ನೀರು ಹಾಕಿದೆ.
......................... ಅಜ್ಜಿಗೆ ಎಲೆ ಅಡಿಕೆ ತಂದು ಕೊಟ್ಟೆ.
...................... ತಂಗಿಯಾ ಮನೆಕೆಲಸ ಮಾಡಿಕೊಟ್ಟೆ.

ಏನಪ್ಪಾ ಇದೆಲ್ಲ ಅಂದು ಕೊಂಡಿರಾ ? ಇದೆಲ್ಲ ನನ್ನ ಬಾಲ್ಯದ ನೆನಪುಗಳು. ಹೀಗೆ ಸುಮ್ಮನೆ ಬಾಲ್ಯದ ಘಟನೆಗಳನ್ನು ನೆನಸಿಕೊಳ್ಳುತ್ತಿದ್ದಾಗ ನೆನಪಿಗೆ ಬಂದದ್ದು ನಾನು ಪ್ರೈಮರಿ ಸ್ಕೂಲ್ನಲ್ಲಿದ್ದಾಗ ಬರೆಯುತ್ತಿದ್ದ "ದಿನಕ್ಕೊಂದು ಒಳ್ಳೆ ಕೆಲಸ" ! ಆಗೆಲ್ಲ ಈಗಿನಂತೆ ಪ್ರಾಜೆಕ್ಟ್ ಗಳ ಭರಾಟೆ ಇರಲಿಲ್ಲ ನಮ್ಮ ಶಾಲೆಯಲ್ಲಿ. ಆಗ ಮಾಮೂಲಿ ಹೋಂ ವರ್ಕ್ ಜೊತೆಗೆ ನಮಗೆ ಇದ್ದ ಒಂದೆ ಒಂದು ವಿಶಿಷ್ಟ ಹೋಂ ವರ್ಕ್ ಅಂದ್ರೆ "ದಿನಕ್ಕೊಂದು ಒಳ್ಳೆ ಕೆಲಸ" !! ವಾರಕ್ಕೊಮ್ಮೆ ನೋಡುತ್ತಿದ್ದರು ವಾರಕ್ಕಾಗುವಷ್ಟು ಒಳ್ಳೆ ಕೆಲಸವನ್ನು ಹುಡುಕಬೇಕಾಗುತ್ತಿತ್ತು. ಬರೆದದ್ದನ್ನೇ ಬರೆಯುವ ಹಾಗಿಲ್ಲ :(. ಅದದೇ ಒಳ್ಳೆಯ ಕೆಲಸಗಳನ್ನು ಮತ್ತೆ ಮತ್ತೆ ಯಾಕೆ ಮಾಡಬಾರದು ಎಂಬುದು ನಮ್ಮ ತರ್ಕ. ಆದ್ರೆ ನಮ್ಮ ತರ್ಕ ಕೇಳೋರ್ಯಾರು ? ಹಾಗಾಗಿ ವಿಧಿಯಿಲ್ಲದೆ ಹೊಸ ಹೊಸ ಒಳ್ಳೆಯ ಕೆಲಸಗಳನ್ನು ಹುಡುಕಲೆ ಬೇಕಾಗುತ್ತಿತ್ತು. ಹೀಗೆ ನನ್ನ ಹೈಯರ್ ಪ್ರೈಮರಿ ಸ್ಕೂಲ್ ನ ಮೂರು ವರುಷಗಳಲ್ಲಿ ಹೊಸ ಹೊಸ ಒಳ್ಳೆಕೆಲಸಗಳನ್ನ ಬರೆದದ್ದಾಯ್ತು ( ಪ್ರತಿ ವರುಷ ಕ್ಲಾಸ್ ಟೀಚರ್ ಬೇರೆಯವರದ್ದರಿಂದ ಹಳತನ್ನೇ ಕಾಪಿ ಹೊಡೆದದ್ದು ಬಹಳ ಗುಟ್ಟಿನ ವಿಚಾರ, ಇದನ್ನು ಮಾತ್ರ ನಮ್ಮ ಮೇಡಂ ಗೆ ಹೇಳ್ ಬೇಡಿ ಪ್ಲೀಸ್ ..). ನಾನು ಗ್ರೂಪ್ ಲೀಡರ್ ಆಗಿದ್ದರಿಂದ ನನ್ನ ಪುಸ್ತಕವನ್ನ ಮೇಡಮ್ಮೇ ಕರೆಕ್ಷನ್ ಮಾಡ್ತಾ ಇದ್ದರು ( ಹಾಗಾಗಿ ಕೆಲವೊಮ್ಮೆ ರಿಯಾಯ್ತಿ ಸಿಕ್ತ ಇದ್ದ ವಿಚಾರ ಬಹಳ ಗೌಪ್ಯವಾದದ್ದು ಆ ದಿನಗಳಲ್ಲಿ ). ಇನ್ನು ನನ್ನ ಗುಂಪಿನ ಬೇರೆಲ್ಲ ಹುಡುಗರ ಒಳ್ಳೆ ಕೆಲಸದ ಪುಸ್ತಕಗಳನ್ನ ಕರೆಕ್ಸನ್ ಮಾಡೋ ಗುರುತರ (!!) ಜವಾಬ್ದಾರಿ ನನ್ನದು. ಬಹುಷಃ ಆ ದಿನಗಳಲ್ಲಿ ನಾನು ಬಹಳಷ್ಟು ಖುಷಿ ಪಡುತ್ತಿದ್ದ ಕೆಲಸಗಳಲ್ಲಿ ಇದು ಒಂದು (ಬೇರೆಯವರ ಒಳ್ಳೆ ಕೆಲಸದಲ್ಲಿ ತಪ್ಪು ಹುಡುಕೋದು ಖುಷಿ ಕೊಡುವ ಕೆಲಸವಲ್ಲದೇ ಮತ್ತಿನ್ನೇನು ? ! ) .

ಅಪ್ಪನಿಗೆ ಬೀಡಿ ತಂದು ಕೊಟ್ಟದ್ದು , ಬೆಳಿಗ್ಗೆ ಬೇಗನೆ ಸ್ನಾನ ಮಾಡಿದ್ದು , ಸ್ಕೂಲಿಗೆ ಬಂದದ್ದು ಎಲ್ಲವು ಒಳ್ಳೆ ಕೆಲಸಗಳ ಲಿಸ್ಟ್ ನಲ್ಲಿ ಇರುತ್ತಿದ್ದವು. ಕೆಲವೊಮ್ಮೆ ಗುಂಪಿನ ಹುಡುಗರಿಗಾಗಿ ಒಳ್ಳೆ ಕೆಲಸಗಳ ಪಟ್ಟಿ ಮಾಡಿ ಕೊಡಬೇಕಾದ ಸೋಸಿಯಲ್ ರೆಸ್ಪಾನ್ಸಿಬಿಲಿಟಿ ಕೂಡ ನನ್ನ ಮೇಲಿರುತ್ತಿತ್ತು. ಒಟ್ಟಿನಲ್ಲಿ ವಾರಕ್ಕೊಮ್ಮೆ ಒಳ್ಳೆಕೆಳಸಗಳನ್ನು ಕೆ.ಜಿ.ಗಟ್ಟಲೆ ನೋಡಬೇಕಾದ ಪರಿಸ್ಥಿತಿ ನನ್ನದು ಮತ್ತು ನನ್ನ ಸ್ನೇಹಿತರದ್ದು. ನಾವು ಒಳ್ಳೆಯದ್ದೋ ಕೆಟ್ಟದ್ದೋ ಎಂದು ನಿರ್ಧರಿಸಲಾಗದ ಒಳ್ಳೆ ಕೆಲಸಗಳು ಮೇಡಮ್ ಮುಂದೆ ಚರ್ಚೆಗೆ ಒಳಗಾಗುತ್ತಿತ್ತು. ನವಿರಾದ ಹಾಸ್ಯದ ಲೇಪನದೊಂದಿಗೆ ಕೆಲಸವನ್ನು "ಕೆಲಸ, ಒಳ್ಳೆ ಕೆಲಸ, ಕೆಟ್ಟ ಕೆಲಸ" ಎಂದು ಕೆಟಗರೈಸ್ ಮಾಡುವ ಕೆಲಸ ಎಲ್ಲರ ಮುಂದೆ ಆಗುತ್ತಿತ್ತು. ಇಷ್ಟೆಲ್ಲದ್ದರಿಂದ ಆಗುತ್ತಿದ್ದ ಉಪಯೋಗ ಅಂದರೆ ನಮ್ಮಲ್ಲಿ ನಾವು ಮಾಡುತ್ತಿದ್ದ ದೈನಂದಿನ ಕೆಲಸಗಳಲ್ಲಿ ಒಳ್ಳೆಯದನ್ನು ಗುರುತಿಸುವ ಶಕ್ತಿ ದಿನೆ ದಿನೇ ಹೆಚ್ಚಾಗುತ್ತಿದ್ದದ್ದು ಅದರ ಜೊತೆಗೆ ಹೊಸ ಹೊಸ ಒಳ್ಳೆಯ ಕೆಲಸಗಳ ಅವಿಷ್ಕಾರ ( ಹೌದು .. ಎಲ್ಲರಿಗಿಂತಲು ವಿಭಿನ್ನವಾದ ಒಳ್ಳೆಕೆಲಸ ಮಾಡಿದವರಿಗೆ ಮೇಡಮ್ ಶಬ್ಬಾಃಷ್ ಅನ್ನೋದರ ಜೊತೆಗೆ ಚಾಕೊಲೇಟ್ ಸಿಗೋ ಚಾನ್ಸಸ್ ಕೂಡ ಇರ್ತಾ ಇದ್ದದ್ದರಿಂದ ಅವಿಷ್ಕಾರ ಅತಿ ಅಗತ್ಯವಾಗಿತ್ತು ! ) . ಬಹುಶಃ ಒಳ್ಳೆಕೆಲಸಗಳನ್ನು ಬರೆದಿಡುವ ಮತ್ತು ಹುಡುಕುವ ಅಭ್ಯಾಸ ಮುಂದುವರೆದಿದ್ದರೆ ( ಹಾಗು ನಿಜವಾಗಲೂ ಅವುಗಳನ್ನು ಕಾರ್ಯ ರೂಪಕ್ಕೆ ತಂದಿದ್ದರೆ ) ಇವತ್ತು ಜಗತ್ತಿನ ಅತಿ ಒಳ್ಳೆಯ ಮನುಷ್ಯ ನಾನುಗುತ್ತಿದ್ದನೇನೋ ?!

ಆದರೇನು ಮಾಡುವುದು ಹೈಯರ್ ಪ್ರೈಮರಿ ಸ್ಕೂಲ್ ಮುಗಿದ ಮೇಲೆ ನಾನು ಬಹಳಷ್ಟು ಬೇರೆ ಕೆಲಸಗಳಲ್ಲಿ ಬ್ಯುಸಿಯಾಗಿದ್ದರಿಂದ ( ಕೇಳುವವರು ಯಾರು ಇಲ್ಲದ್ದರಿಂದ ಅಂತ ಓದಿಕೊಳ್ಳುದು !! ) ನಾನು ಮಾಡಿದ ಒಳ್ಳೆಕೆಲಸಗಳನ್ನು ದಿನ ನಿತ್ಯ ಬರೆದಿಡಲಾಗಲಿಲ್ಲ ! ಮತ್ತೆ ನನ್ನ ಕೈಯಲ್ಲಿ ಒಳ್ಳೆ ಕೆಲಸಮಾಡಿಸಲು ಮತ್ತು ಅದನ್ನೆಲ್ಲ ಬರೆದಿಡಿಸಲು ಪ್ರೇಮ ಮಿಸ್,ಪದ್ಮ ಮಿಸ್ ಮತ್ತು ಶ್ರೀಮತಿ ಮಿಸ್ ಬರಬೇಕಾದಿತು ಮತ್ತು ಬಂದು ಪ್ರೀತಿಯಿಂದ ಗದರಿಸಬೇಕಾದೀತು?. ಹಾಗೆಯೇ ನಾನು ಪ್ರೈಮರಿ ಸ್ಕೂಲ್ ನಲ್ಲಿದ್ದಾಗ ಮಾಡಿದ್ದ ಎಲ್ಲ ಒಳ್ಳೆಯ ಕೆಲಸಗಳು ನಮ್ಮ ಅಮ್ಮ ಹಳೆ ಪಾತ್ರೆ ಮತ್ತು ಹಳೆ ಬುಕ್ ಗೆ ವಿನಿಮಿಯವಾಗಿ ಹೊಸಪಾತ್ರೆ ಕೊಂಡುಕೊಂಡಾಗ ಹೊಸರೂಪ ಪಡೆದು ಅಡುಗೆ ಮನೆ ಸೇರಿದೆ . ಹೀಗಾಗಿ ನಾನು ಒಳ್ಳೆಯವನು ಎನ್ನುವುದಕ್ಕೆ ಇದ್ದ ಒಂದೆ ಒಂದು ಸಾಕ್ಷಿ ಕೂಡ ಇಂದು ಇಲ್ಲದಾಗಿದೆ. ಅದಕ್ಕೆ ನಾನು ಬಿಡುವಿದ್ದಾಗಲೆಲ್ಲ ಅಡುಗೆ ಮನೆಯಲ್ಲಿ ಏನಾನ್ನಾದ್ರು ಹುಡುಕುತ್ತಿರುವುದು ಅಂತಾ ಹೇಳಿದರೆ ಯಾರು ನಂಬುವುದಿಲ್ಲ .. ಒಳ್ಳೆಯತನ ಮತ್ತು ನಿಜಕ್ಕೆ ಇದು ಕಾಲ ಅಲ್ಲ ಬಿಡಿ !!.

ಇಂತಿ ಒಳ್ಳೆಹುಡುಗ ( ನಿಜವಾಗ್ಲೂ ),
ಸಂತೋಷ

7/13/08

ಚುಟುಕಗಳು

ಬದುಕಿನ ವಿವಿಧ ಕಾಲಘಟ್ಟಗಳಲ್ಲಿ ಬರೆದ ಕೆಲವು ಚುಟುಕುಗಳನ್ನ ಇಲ್ಲಿ ಒಂದೆಡೆಯಿಡುತ್ತಿದ್ದೇನೆ.

ಇರುಳಿಗೆ ತೆರೆಯೆಳುಯುವನೋ ಆ ನೇಸರನು
ಮೋಡದ್ ನೆರಳಿಗೆ ಯಾಕ್ ಬೆದರ್ವಯೋ
ಗಾಳಿ ಬೀಸೇ ತನ್ತಾನೆ ಸರಿಯ್ವುದೋ

ಬರಿಯೇ ಬೊಗಳೆ ಮಂತ್ರವಲ್ಲವೋ
ಇದುವೇ ನಮ್ಮ ನಿಮ್ಮ ಜೀವನಯಂತ್ರ
ವ ನಡೆಸೋ ನಿಜ ತಂತ್ರಗಳು

ಬರಿಯೇ ಮಂತ್ರದಿಂ ಆಗುವುದಾದರೂ ಏನ
ತಂತ್ರಗಳು ಆಗೇ ಜೀವನ್ಮಂತ್ರಗಳು ಏಕಾಗುವುದು
ನೋಡ ಜೀವನ ಅತಂತ್ರ ?

ಇರುವದಂ ಬಿಟ್ ಬರುವುದಕ್
ಕಾಯ್ದ್ ಕುಳಿತೊಡೆ ಇರುವುದು ಗತವಾಗಿ
ಹೋಗ್ವುದೋ ಭೂತದೊಳಗೆ

ಬರೀ ಪುಸ್ತಕದ ಹುಳುವಾದರೇನ್ ಬಂತೋ
ಅರಿಯೋ ಹುಳುವಿನ್ ಜೀವನ್ಮರ್ಮವ , ಫಲವ
ಮರೆತು ನಡೆಸೋ ನಿನ್ ಪಾಲಿನ ಕರ್ಮವ

ಬೇಡಗಳು ಬೇಕಾಗುವುವು , ಬೇಕುಗಳು
ದೂರವಾಗುವುವು ಕನಸಿನ ಬಣ್ಣ ಕಳಚೇ
ನನಸಿನೊಳು ತಿಳಿಯೋ

ಕನಸಿನೊಳು ಬದುಕು ಹನುಮ ಕಂಡ ಭಾಸ್ಕರ ,
ನನಸಿಗಿಳಿಯೇ ಕೆಂಡಸಾಗರ ; ಹಣ್ಣಾದರ್
ಉಳಿವೇ , ಕೆಂಡವಾದರ್ ಅಳಿವೇ

4/7/08

ಯುಗಾದಿ

ಯುಗ ಯುಗಾದಿ ಕಳೆದರೂ ಯುಗಾದಿಯೇನೋ ಎಂದಿನಂತೆ ಮರಳಿ ಬರುತಿದೆ
ಹೊಸ ಹರುಷ,ಬೃಂಗದ ಸಂಗೀತ,ಹೂವಿನ ನಸುಗಂಪು,ಜೀವಕಳೆಯ ಹೊಸತು ತರುತಿದೆ.


ಅಖಿಲ ಜೀವಜಾತವೂ ಹೊಂಗೆ ಹೂವ ತೊಂಗಲಲ್ಲೋ , ಬೃಂಗದ ಸಂಗೀತದಲ್ಲೋ
ಹೂವಿನ ನಸುಗಂಪಿನಲ್ಲೋ ವರುಷ ವರುಷವೂ ಹರುಷ ಕಂಡು ಕೊಳುತಿದೆ.

ಅದೇ ಹೊಂಗೆಹೂವು , ಬೃಂಗದ ಸಂಗೀತ , ಹೂವಿನ ನಸುಗಂಪು
ನಮಗೆ ಮಾತ್ರ ಹರುಷ ತಾರದ್ಯಾತಕೋ ? ಯುಗಾದಿ ನಮ್ಮನಷ್ಟೇ ಮರೆತಿದೆಯೋ ?

ಯುಗಾದಿ ತಂದ ಸಹಜ ಹರುಷ ಸಾಲದ್ಯಾತಕೋ ? ವರುಷ ವರುಷವು ನಮ್ಮಾಸೆಯಷ್ಟೇ ಬೆಳೆಯುತಿದೆ
ಬಾಲ್ಯದಲ್ಲಿ ಹರಯ , ಹರಯದಲ್ಲಿ ಬಾಲ್ಯ ಬಯಸುವ ಪರಿ ನಮ್ಮಲ್ಲಷ್ಟೇ ಉಳಿದಿದೆ

ಅಖಿಲ ಜೀವಜಾತದಂತೆ ಯುಗ ಯುಗಾದಿಯಲ್ಲೂ ಇದ್ದುದರಲ್ಲೇ ಹರುಷ ಪಡುವ
ಇಲ್ಲದುದನೇ ನೆನೆಸಿ ಕೊರಗದ ಸಾಜತೆಯ ವರವೆಮಗೆ ಬೇಡಿ ಕೊಳುವ

ತಮಗೆಲ್ಲರಿಗೂ ಸರ್ವದಾರಿ ಸಂವತ್ಸರದ ಶುಭಾಶಯಗಳು. - ಸಂ.K

PS : ಇದು ಬೇಂದ್ರೆಯವರ ಯುಗಾದಿಗೆ ಖಂಡಿತವಾಗಿಯೂ ಉತ್ತರವಲ್ಲ. ಬೇಂದ್ರೆಯವರ ಯುಗಾದಿಯನ್ನೇ ಹಾಡಿಕೊಂಡು ಬೆಳೆದವನು ನಾನು ಕೂಡ. ಸಹಜವಾದದ್ದಾವುದು ಹರುಷ ಕೊಡದ ಇಂದಿನ ಪರಿಸ್ಥಿಯಲ್ಲಿ ಬೇಂದ್ರೆಯವರ ಯುಗಾದಿಯಿಂದ ಪ್ರೇರಿತನಾಗಿ ಬರೆದ ಕವನ !! ಇದು. – 07/04/08

ಕವಿಪ್ರಜ್ಞೆ ಜಾಗೃತವಾದಾಗ !

ನನ್ನ ಹೃದಯ ವೀಣೆಯ "ಶೃತಿ" ನೀ ಮಿಡಿದಾಗ
ಕಲ್ಲಾದ ಹೃದಯದಲ್ಲೂ ಮೂಡಿಸಿಹುದುದೆಂತಹುದೋ ಕಂಪನ
ಬರಡಾದ ಭಾವಗಳಿಗೂ ಮಾಡಿಸಿಹುದೂ ಹೊಂಗನಸುಗಳ ಸಿಂಚನ

ನನ್ನ ಮೌನದೊಳಮನೆಯ "ವಾಣಿ" ನೀ ನುಡಿದಾಗ
ಜಡಗಟ್ಟಿದ ಜೀವಿಯಲು ಮಾಡಿಸಿದೆ ಪ್ರಾಣ ಸಂಚಲನ
ನನ್ನ ನಿಶ್ಚೇತ ಕಣಕಣಗಳಲ್ಲೂ ತುಂಬಿದೆ ನವಚೇತನ

ನನ್ನ ನನಸಿನ ಭಾವಲಹರಿಯ "ಸ್ವಪ್ನ" ನೀ ಕಾಡಿದಾಗ
ನೀರಸವಾದ ಜೀವನದಲ್ಲೂ ಉಂಟಾಗಿದೆ ಉಹಿಸಲಾಗದ ರೋಮಾಂಚನ
ನೋವಿನಲ್ಲಿಯೂ ನಲಿವ ಕಂಡಿದೆ ಹರುಷಗೊಂಡ ಮೈಮನ

ಹೃದಯದೊಳಗಣ ಭಾವನೆಗಳ 'ಶೃತಿ' , ಅಂತರಂಗದ ಮಾತುಗಳ 'ವಾಣಿ'
ವಿಚಾರಧಾರೆಗಳ ಅಮೂರ್ತ 'ಸ್ವಪ್ನ' ಇವೆಲ್ಲವಾಗಿಹವಿಲ್ಲಿ ಕಾವ್ಯ ;
ಪದಪುಂಜಗಳೊಡನೆ ಭಾವನೆಯು ಸೇರಿದಾಗ, ನನ್ನೊಳಗಣ 'ಕವಿಪ್ರಜ್ಞೆ' ಜಾಗೃತವಾದಾಗ !

ಹುಡುಗಾ(ಕಾ)ಟದ ಹುಡುಗ

ಅವನು ಹುಡುಗಾಟದ ಹುಡುಗ
ಅವಳು ಹುಡುಕಾಟದ ಹುಡುಗಿ.
ಅವನು ಹುಡುಕಾಟಕ್ಕಾಗಿ ಪ್ರೇಮಿಸಿದ,
ಹುಡುಗಾಟ ಬಿಟ್ಟು ಪೂರ್ಣ-ಪ್ರೇಮಕ್ಕಾಗಿ ಪರಿತಪಿಸಿದ.

ಅವಳು ಹುಡುಕಾಟಕ್ಕಾಗಿ ಅನುಸರಿಸಿದಳು
ಹುಡುಕಾಟ ಬಿಡಲಿಲ್ಲ , ಹೊಂಗನಸುಗಳಿಗಾಗಿ ಕನವರಿಸಿದಳು.
ಅವನು ಮನಬಿಚ್ಚಿ ಹೇಳಿದನು;
ಅವಳು ಮನವಿಟ್ಟು ಕೇಳಿದಳು.

ಅವಳೇನು ಹೇಳಲಿಲ್ಲ; ಆದರೂ ಇವನೆ ಏನೇನೋ ಹೇಳಿಕೊಂಡನು
ಅವಳು ಸಮಯಕ್ಕಾಗಿ ಕಾದಳು ; ಪದಗಳಿಗಾಗಿ ಹುಡುಕಿದಳು
ಅವಳು ಹೇಳಿದಾಗ ಕೇಳಲಾಗಲಿಲ್ಲ ಇವನಿಗೆ
ಹುಡುಗಾಟಕ್ಕಾಗಿ ಕೊರಗಿದನು

ಈಗ ಅವನು ಹುಡುಕಲಾರಂಭಿಸಿದ ತನ್ನೊಳಗಿನ ತನ್ನನು
ಅವಳ ಹುಡುಕಾಟ ನಿಲ್ಲಲಿಲ್ಲ , ಅವನ ಹುಡುಗಾಟ ನಿಂತಿತು.
ಇಬ್ಬರು ಹುಡುಕುತ್ತಿದ್ದರೂ, ಅವರೀಗ ಸಮಾನಾಂತರ ರೇಖೆಗಳು
ದೂರ ತೀರದಲ್ಲಿಬ್ಬರು ಸೇರಬಹುದೆಂಬುದು ಆಸೆಯ ಅಲೆಗಳು

ಜಗದ ವ್ಯಾಕರಣ ಒಗ್ಗುವುದಿಲ್ಲ ಮನಸ್ಸುಗಳ ಸಾಹಿತ್ಯಕೆ
ನಾಮಪದದ ಹಂಗಿಲ್ಲ ಈ ನಿರಂತರ ಪ್ರೇಮ (?!) ಕಾವ್ಯಕೆ
ಅವಳು ಅವನು ಅಥವಾ ಅವನು ಅವಳಾಗಬಹುದಿಲ್ಲಿ
ಹುಡುಗಾಟ ಹುಡುಕಾಟವಾದರೂ ಈ ಪ್ರೇಮಕತೆಗೆ ಕೊನೆಯೆಲ್ಲಿ ?